Posts

Showing posts from 2024

ದೇವರ ತೋಟ

Image
 Kannada Translation of Robert Frost's poem "God's Garden" ದೇವರ ತೋಟ ದೇವರು ಸುಂದರ ತೋಟವನೊಂದನು ಮಾಡುತ ಹೂಗಿಡ ಹರಹಿದನು; ದಾರಿಯನೊಂದನು ಚಿಕ್ಕದು ಚೊಕ್ಕದು ಅವುಗಳ ನಡುವೆಯೆ ತೋರಿದನು. ಈ ಸುಂದರಬನದೊಳು ಜೀವಿಸಲೆನೆ ಮನುಕುಲವನು ತಾ ಕರೆಸಿದನು, ಇಂತೆಂದನು - "ಓ ನನ್ನಯ ಮಕ್ಕಳೆ, ಚಂದದಲರುಗಳ ನೀಡಿಹೆನು, ಲತೆಗಳನೋರಣಗೊಳಿಸುತಲರಳಿಯ ಪೋಷಿಸಿ ಹೂಗಳನುಪಚರಿಸಿ! ಹಾದಿಗೆ ತೆರಪಿರುವಂತೆಯೆ ಬಿಟ್ಟರೆ ನಿಮ್ಮಯ ಮನೆಯದೊ! ಕಾಣುವಿರಿ" ಹೊಸತೊಬ್ಬನು ಧಣಿ ಬಂದನು ನಂತರ, ಮನುಕುಲದೆಡೆಗವಗೊಲವಿಲ್ಲ, ಪಥವನೆ ಮುಚ್ಚುವ ಪರಿಯಲಿ ಹೊನ್ನಿನ ಹೂಗಳ ಬೆಳೆಸುತ ಸೆಳೆದಿದ್ದ. ಹೊಳೆಯುವ ಹೂಗಳ ಕಂಡಿತು ಮನುಕುಲ, ಥಳಥಳಿಸಿದವವು ಬೆಳಗಿನಲಿ! ಲೋಭದ ಮುಳ್ಳುಗಳಿದ್ದವು ಮರೆಯಲಿ ನಂಜನು ಸೂಸಿದವಾಳದಲಿ! ದೂರಕೆ ದೂರಕೆ ಅಲೆದರು ಹಲವರು ಹೊನ್ನಿನ ಹೂಗಳಲೊಲವಿಟ್ಟು, ಬಾಳಿನಿರುಳಿನಲಿ ದಾರಿಯು ತಪ್ಪಿರೆ ತೊಳಲಾಡಿದರಲ ಗತಿಗೆಟ್ಟು! ಸೊಗಸಿನ ಮಾಯೆಯು ಕುರುಡಾಗಿಸುವುದು ಕೈವಶವಾಗದೆ ಎಚ್ಚರಿರು! ದೇವರು ಸೃಜಿಸಿದ ಬಾನೊಳು ಮಿನುಗುವ ತಾರೆಗಳತ್ತಲೆ ಗಮನವಿಡು. ಅಪ್ಪಟ ನಡೆಯಿಹ ಕೇಡನು ಬಯಸದ ದಾರಿಯ ತೋರುವ ಕೆಳೆಗಳವು, ತಪ್ಪಿದ ಹೆಜ್ಜೆಯ ನೀನಿಡುತಿರಲವು ಹಾದಿಗೆ ಮರಳಿಸಿ ಸಲಹುವುವು. ನೇಸರ ಬೆಳಗಿರೆ ದೇವರು ನೆಟ್ಟಿಹ ಹೂಗಿಡಗಳ ಕಾಪಿಡುತಲಿರು, ಸಗ್ಗವ ತೋರುವ ಹಾದಿಯ ತೆರಪಿಗೆ ಬೆವರನು ಹರಿಸುತ ದುಡಿಯುತಿರು! - ವೆಂಕಟೇಶಪ್ರಸನ್ನ The or...

ನೆನಪು

Image
  ಪ್ರಕೃತಿಸೌಂದರ್ಯವನು ಬೆರಗಾಗಿ ಸವಿದಿರಲು  ನಿನ್ನ ಮಡಿಲೊಳು ಆಡಿ ಬೆಳೆದಿದ್ದ ನೆನಪು ಹೇಮಾವತಿಯ ಜಲವ ಕಣ್ಗೊತ್ತಿ ಸೇವಿಸಿರೆ ನೀನೂಡಿಸಿದ ಸುಧೆಯ ದಿವ್ಯತೆಯ ನೆನಪು ಸುಬ್ಬುಲಕ್ಷ್ಮಿಯ ಭಕ್ತಿಗಾನಗಳನಾಲಿಸಿರೆ ನೀನೆನಗೆ ಹಾಡಿದ್ದ ಲಾಲಿಗಳ ನೆನಪು ಚನ್ನಕೇಶವಗುಡಿಯ ಶಾಂತಲೆಯ ಶಿಲ್ಪದಲಿ ನೀ ತೋರಿದಕ್ಕರೆಯ ಔನ್ನತ್ಯ ನೆನಪು ಶಾರದೆಯ ಸಾನ್ನಿಧ್ಯದಲಿ ನಿಂತು ಕೈ ಮುಗಿಯೆ ನೀನಂದು ತಿದ್ದಿಸಿದ ಅಕ್ಷರದ ನೆನಪು ತುಳಜಾನಿವಾಸಿನಿಯ ಪೀಠಕ್ಕೆ ಹಣೆಯೊತ್ತೆ ನೀ ಮಮತೆಯಿಂದೆನ್ನನಪ್ಪಿದ್ದ ನೆನಪು ವರಲಕ್ಷ್ಮಿಯಿತ್ತಿರುವ ನೆಮ್ಮದಿಗೆ ವಂದಿಸಿರೆ ನೀನೆನಗೆ ಬೆಂಗಾವಲಾಗಿದ್ದ ನೆನಪು ಗುಬ್ಬಿಗಳ ಚಿಲಿಪಿಲಿಯನಾಲಿಸಿರೆ ನೀನೆನಗೆ ಕಚಗುಳಿಯನಿತ್ತು ನಲಿದಾಡಿಸಿದ ನೆನಪು ಕರುನಾಡ ಮಣ್ಣಿನಲಿ ಬೆಳೆದಕ್ಕಿಯನ್ನವನು ನೀನೆನಗೆ ತುತ್ತಿತ್ತು ಹರ್ಷಿಸಿದ ನೆನಪು ಭಾರತಿಯ ಪುಣ್ಯಧರೆಯೊಳು ಪುಟ್ಟಿಸಿದ ನಿನ್ನ ಋಣವ ನಾ ತೀರಿಸಲು ಅರಿದೆಂಬ ನೆನಪು ಮನುಕುಲದ ಸಂಸ್ಕಾರವನು ಧಾರೆಯೆರೆದೆನಗೆ ಗುರುವಾಗಿ ನಡೆನುಡಿಯ ಕಲಿಸಿದ್ದ ನೆನಪು ಹೂದೋಟವನು ಹೊಕ್ಕು ಕಂಪನಾಸ್ವಾದಿಸಿರೆ  ವನಸುಮದವೊಲು ನೀನು ಜೀವಿಸಿದ ನೆನಪು - ವೆಂಕಟೇಶಪ್ರಸನ್ನ This was inspired by two works: 1. The poem "ನಾನು" by Dattatreya Ramachandra Bendre 2. This nice song written and sung beautifully by Hindustani singer Shruti Bode:

ಪರಿದೃಶ್ಯ

Image
  ಪರಿದೃಶ್ಯ ಪುಗ್ಗೆಯ ಮಾರುವ ಅಣ್ಣನು ಬಂದಿಹ, ಹಿಗ್ಗೋಹಿಗ್ಗದು ಮಕ್ಕಳಿಗೆ. ಗಿಲಕಿಯನಾಡಿಸಿ ಪೀಪಿಯನೂದಿಹ, ನಲಿವಿನ ಪರಿಸರವೆಲ್ಲ ಕಡೆ! ಬಣ್ಣದ ಹಾಳೆಯ ಗಾಳಿಯ ಪಟವಿದೆ ಚಿಣ್ಣಿಯ ಕೋಲಿದೆ, ಬುಗುರಿಯಿದೆ, ಗಿರಿಗಿರಿಗುಟ್ಟುವ ಗಿರಿಗಿಟ್ಟಲೆಯಿದೆ, ಬುರುಗಿನ ಗುಳ್ಳೆಯ ಬಳೆಗಳಿವೆ! ಗಿಲಕಿಯು, ಪುಗ್ಗೆಯು, ತಗಡಿನ ತುತ್ತುರಿ, ತಲೆಯಾಡಿಸುವಾಟಿಕೆಗಳಿವೆ, ಕಪ್ಪೆಯ ಚಿಪ್ಪಿದೆ, ಚನ್ನೆಯ ಮಣೆಯಿದೆ, ತಿಪ್ಪರಲಾಗದ ಗೊಂಬೆಯಿದೆ! ಸಕ್ಕರೆ ಕಾಳಿದೆ, ಅಜ್ಜಿಯ ಕೂದಲು, ಮುಕ್ಕುವ ಹುರಿಗಾಳಿರಬಹುದು! ಜಜ್ಜಿದ ಹುಣಿಸೆಯು, ಬೋರೆಯ ಹಣ್ಣಿದೆ ಗಜ್ಜುಗ ಗೋಲಿಗಳಿರಬಹುದು! ಹೊತ್ತು ತರುತಲಿಹನವನದನೆಲ್ಲವ ಸುತ್ತಿಹುದವನನು ಹಸುಳೆಪಡೆ! ರಟ್ಟೆಗಳೆರಡೇ, ವಿಸ್ಮಯವೇನೆನೆ ಸೃಷ್ಟಿಯವನ ಬೆನ್ನೇರಿಹುದೆ? ಅಚ್ಚರಿಯಿಂದಲಿ ನೋಡುತಲವನನು ಮೆಚ್ಚಿದ ಚಿಣ್ಣನು ಕಣ್ಣಿನಲೇ!  ಸಡಗರದಿಂದಲಿ ತಾಯಿಯ ಕೇಳಿದ, ತಡೆಯಿರದಾಯಿತು ಕಲ್ಪನೆಗೆ! ಜಟೆಯಲಿ ನಾಗರ, ಶಶಿ, ಗಂಗೆಯರಿಹ ನಟರಾಜನು ಇವನೇನಮ್ಮಾ? ವಸುದೇವನ ಸುತ ರಣದಲಿ ನರನಿಗೆ ಬೆಸಸಿದ ರೂಪವಿದೇನಮ್ಮಾ? ಗಿರಿಯನೆ ಹೊರುತಲಿ ರಾಘವರಿಗೆ ಮ- ದ್ದೆರೆದಿಹ ಹನುಮನು ಇವನೇನೆ? ಸಾವಿರದಾಸೆಗಳೆಲ್ಲವ ನೀಡುವ ದೇವರ ಲೋಕದ ಗೋವೇನೆ? ಚಿಣ್ಣರ ಮೊಗದಲಿ ನಗುವನು ಮೂಡಿಸಿ ತನ್ನಯ ಸಂತಸ ಕಂಡವನು, ಅರಿವು-ಇರವು-ನಲಿವೆಂಬುವನೆಲ್ಲವ ಮೆರೆಸುತ ದಿನಗಳ ಕಳೆದಿಹನು! ಕುಗ್ಗಿದ ಮನಗಳ ಹಿಗ್ಗಿಸಿ ನಲಿಸುವ ಪುಗ್ಗೆಯ ಪಣ್ಯವ ನಾ ತೆರೆವೆ! ಕೊಳ್ಳಲು ಜನ ಬರದಿ...

ಹೃದಯಂಗಮ ರಾಮ

Image
ರಾಮಮಂದಿರವನ್ನು ನೋಡಲು ಬಂದ ಅಳಿಲುಗಳು, ಹದ್ದುಗಳು, ಜಿಂಕೆಗಳು, ಕೋತಿಗಳು ಮತ್ತು ಕರಡಿಗಳು ತಮ್ಮತಮ್ಮಲ್ಲಿ ಹೇಗೆ ಮಾತನಾಡಿಕೊಳ್ಳಬಹುದೆಂಬ ಒಂದು ಊಹಾತ್ಮಕ ಚಿತ್ರಣದ ಪ್ರಯತ್ನ... ಶ್ರೀರಾಮಜಯಂ! ಹೃದಯಂಗಮ ರಾಮ ಒಲವಿನಿಂದವನೆಮ್ಮ ಬೆನ್ನು ಸವರಿದನಂದು, ತಿಲಕದಂದದ ರಕ್ಷೆ ನಮಗಾಯಿತು, ಬಲವಿಲ್ಲದಿರಲೇನು? ಛಲವಳಿಲಿಗಿಹುದೆನುತ ನೆಲೆನಿಂತನೆಮ್ಮೆದೆಯೊಳನವರತವು! ಹಲವರುಷಗಳ ಕಳೆದು ದೊರೆತುದೀ ಪುಣ್ಯಫಲ, ಜಲಜನೇತ್ರನ ಪುರದಿ ಗುಡಿ ಮರಳಿತು! ಬಲಿದಾನವನ್ನೆಸಗಿದವರಳಿಲುಸೇವೆಯಲಿ ಕುಲವೆಮ್ಮದೆಲ್ಲರಿಗೆ ನೆನಪಾಯಿತು! *** ದುರುಳ ಕಳುವಾಗಿಸಿರಲವನ ಹೃನ್ಮಂದಿರವ ಭರದಿ ಸೆಣೆಸಿದರೆಮ್ಮ ಕುಲತಿಲಕರು, ಗರುಡ ಲೆಂಕರ ತೆರದೊಳಸುವ ಮುಡಿಪಾಗಿಸಿದ ಪರಮಪಾವನಪಾತ್ರರವರಾದರು! ಗರಿಗಳನು ತರಿದರೇಂ? ರೆಕ್ಕೆಗಳ ಕಡಿದರೇಂ? ಬರವಿಗೆನ್ನುತ ಕಾದು ಕುಳಿತರಲ್ಲ! ಗರಿಗೆದರಿಹುದು ಕಾಣು ರಾಮದೇಗುಲವಿಂದು ಜರೆಯು ಚಿರಯೌವನವ ಪಡೆಯಿತಲ್ಲ! *** ಹುಲ್ಲೆಸಾರಂಗಗಳಿಗೆಂತು ಭಯವಿದ್ದೀತು? ಫುಲ್ಲಲೋಚನನವನು, ಅಭಯದಾತ! ಸಲ್ಲದವನೊಬ್ಬ ತಾ ಸೋಗಿನಲಿ ವಂಚಿಸಿರೆ ನಿಲ್ಲುವುದೆ ಧರ್ಮನದಿ? ಹರಿವು ಸತತ. ತಲ್ಲಣವು ಕಳೆದಿಹುದು, ಮಾಯೆ ತಾ ಸರಿದುಹುದು, ಬಲ್ಲಿದರು ತೀರ್ಪನಿತ್ತಿಹರು ನೋಡು! ಲಲ್ಲೆಮಾತಿನ ಕುವರನಲ್ಲೆ ಮರಳಿಹನಿಂದು, ಕಲ್ಲಗುಡಿ, ಕೈಮುಗಿದು ಭಯವ ದೂಡು! *** ಸೇತುವನು ಬೆಸೆಯಿಸಿದನೆಮ್ಮ ಪೂರ್ವಜರಿಂದ ಮಾತೆ ಸೀತೆಯ ಸೇವೆ ದಯಪಾಲಿಸಿ, ಪಾತಕಿಯ ಪಡೆಯೆದುರು ಹೋರಿಸಿದನೊಡಗೂಡಿ ಕೋತಿಗ...