ಗಡಿನಾಡ ಬೇಲೂರು ಖಿದ್ರಾಪುರ
ಕರ್ನಾಟಕದಲ್ಲಿ ಶಿಲ್ಪಕಲಾ ಸೌಂದರ್ಯವನ್ನು ಉತ್ತುಂಗಕ್ಕೇರಿಸಿರುವ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನೇ ಹೋಲುವ ದೇಗುಲವೊಂದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಪ್ರದೇಶದಲ್ಲಿ ಇದೆಯೆಂದರೆ ಯಾರಿಗೇ ಆದರೂ ಅಚ್ಚರಿಯಾಗದಿರದು. ಹೌದು, ಕೊಲ್ಹಾಪುರ ಜಿಲ್ಲೆಗೆ ಸೇರಿದ ಶಿರೋಳ ತಾಲ್ಲೂಕಿನ ಖಿದ್ರಾಪುರ ಎಂಬ ಸಣ್ಣ ಹಳ್ಳಿಯ "ಕೋಪೇಶ್ವರ" ಶಿವ ದೇವಾಲಯವೇ ಆ ಸ್ಮಾರಕ. ಕೃಷ್ಣಾ ನದಿಯ ದಡದಲ್ಲಿರುವ ಖಿದ್ರಾಪುರ ಕರ್ನಾಟಕಕ್ಕೆ ಅಂಟಿಕೊಂಡಂತಿರುವ ಮಹಾರಾಷ್ಟ್ರದ ಒಂದು ಹಳ್ಳಿ. ವಾಸ್ತವವಾಗಿ ಈ ಊರಿನಲ್ಲಿ ಹರಿಯುವ ಕೃಷ್ಣಾ ನದಿಯ ಒಂದು ದಡ ಮಹಾರಾಷ್ಟ್ರಕ್ಕೆ ಸೇರಿದರೆ ಮತ್ತೊಂದು ದಡ ಕರ್ನಾಟಕಕ್ಕೆ ಸೇರುತ್ತದೆ. ಹತ್ತಿರದ ಊರುಗಳಿಂದ ಎರಡೂ ರಾಜ್ಯದ ಭಕ್ತರು ಈ ದೇಗುಲಕ್ಕೆ ಹೋಗುತ್ತಾರೆ. ಶಿವರಾತ್ರಿಯ ಸಮಯದಲ್ಲಿ ಈ ದೇಗುಲ ವಿಶೇಷ ಪೂಜೆಗಳಿಂದ ಭಕ್ತಾದಿಗಳನ್ನು ಕೈಬೀಸಿ ಕರೆಯುತ್ತದೆ. ಚಿತ್ರ ೧: ಕೋಪೇಶ್ವರ ಶಿವ ದೇವಾಲಯ: ಹಿಂಭಾಗದಿಂದ ಕಾಣಸಿಗುವ ಭವ್ಯ ನೋಟ ಸುತ್ತಲಿನ ಕೆಲವು ಊರುಗಳನ್ನು ಬಿಟ್ಟರೆ ಹೆಚ್ಚು ಜನರಿಗೆ ಮನೋಹರ ಶಿಲ್ಪಕಲೆಯ ಬೀಡಾದ ಖಿದ್ರಾಪುರದ ಕೋಪೇಶ್ವರ ದೇವಾಲಯದ ಬಗ್ಗೆ ತಿಳಿದಿರುವುದು ಕಡಿಮೆ. ಈ ದೇವಾಲಯವನ್ನು ಯಾರು ಯಾವಾಗ ಕಟ್ಟಿಸಿದರೆಂಬ ಸಂಪೂರ್ಣ ಮಾಹಿತಿ ಇಲ್ಲವಾದರೂ, ದೊರೆತಿರುವ ಶಾಸನಗಳ ಪ್ರಕಾರ ೭ನೇ ಶತಮಾನದಲ್ಲಿಯೇ ಇಲ್ಲಿ ಬಾದಾಮಿಯ ಚಾಲುಕ್ಯರು ದೇವಾಲಯ ಕಟ್ಟಿಸುವ ಪ್ರಯತ್ನಗಳನ್ನು ಮಾಡಿರುವುದು ಗೋಚ...