ಪುಣ್ಯವಂತರು ನಾವು...

My attempt at writing a Kannada Poem / Song from a couple of years ago:




ಪುಣ್ಯವಂತರು ನಾವು ಕನ್ನಡಾಂಬೆಯ ಜನರು
ಗಣ್ಯರುದಿಸಿದ ನಾಡೊಳಿನ್ನೊಮ್ಮೆ ಜನಿಸಿಹೆವು
ರನ್ನ ಪಂಪರ ಕಾವ್ಯ ಅಣ್ಣ ಬಸವರ ಭಾಗ್ಯ
ಹೊನ್ನ ಹೃದಯವ ಹೊತ್ತ ಅನ್ನದಾತರ ತವರು

ಹರಿದಾಸ ರಚನೆಗಳ ಭರವಸೆಯ ವಚನಗಳ
ಭರತೇಶ ವೈಭವದ ವರಕವಿಯ ಸಾಲುಗಳ
ಬರೆದೋದಿ ನಲಿದಾಡಿ ನಿರುತ ನೆನೆದನುಭವಿಸಿ
ಸರಸತಿಯನರ್ಚಿಸುವ ಕರುನಾಡಲಿಹೆವು

ಕೊಡಗಲುದಿಸಿರ್ಪ ನದಿ ಪಡುವಣದ ಘಟ್ಟಗಳು
ಕಡೆದ ಗೊಮ್ಮಟ ಮೂರ್ತಿ ಸಿಡಿದೆದ್ದ ಚೆನ್ನಮ್ಮ
ತಡೆವಣೆಯ ಕಟ್ಟೆಗಳ ಬಿಡದೆ ಕಟ್ಟಿದ ಶಿಲ್ಪಿ
ಹಡೆದಿವರ ತಾಯ್ಗೆ ನಮಿಸುವೊಡಹುಟ್ಟಿದವರು

ಅಂದಿನಿಂದಿದ್ದವರು ಇಂದು ಬಂದಿಹ ಜನರ
ಬಂಧುಗಳೆಂಬಂತೆಣಿಸಿ ಚಂದನದ ಮಣೆ ಹಾಸಿ
ಬೆಂದ ಕಾಳಲಿ ಪಾಲು ಕುಂದಾಗದಂತಿತ್ತು
ಅಂಧಕಾರವ ಕಳೆವ ಗಂಧಗುಡಿಯೊಳಗಿಹೆವು

ಮಸ್ತಿಷ್ಕದಲಿ ಮುಂದು ಶಿಸ್ತು ಸಂಯಮವುಂಟು
ತ್ರಸ್ತರಿಗೆ ನೆಲೆ ನೀಳ್ಪ ವಿಸ್ತಾರದೆದೆಯುಂಟು
ಕ್ರೈಸ್ತ ಮುಸ್ಲಿಮ ಹಿಂದು ಕಷ್ಟ ಸುಖಗಳಲೆಂದೂ
ಹಸ್ತ ಜೋಡಿಸಿ ನಡೆವ ಕಸ್ತೂರಿನುಡಿಯವರು

ಆಳೆನ್ನದರಸೆನದೆ ಬಾಳ ಬೆಳಗುವ ಹಲರು
ತಳಿರು ತೋರಣದಂತೆ ನಳನಳಿಸುತಿರಲು
ಅಳಿವಿಲ್ಲ ಕನ್ನಡಕೆ ಬೆಳೆಯುವುದು ಕರುನಾಡು
ಇಳೆಯಣುಗಿಯೊಡಲಿಗರು ಬೆಳಕಾಗಿ ನಿಂತಿರಲು

ಪುಣ್ಯವಂತರು ನಾವು ಕನ್ನಡಾಂಬೆಯ ಜನರು,
ಪುಣ್ಯವಂತರು ನಾವು ಕನ್ನಡಾಂಬೆಯ ಜನರು...


- ವೆಂಕಟೇಶಪ್ರಸನ್ನ

Some explanations for the difficult parts:
  • ಭರತೇಶ ವೈಭವ = An epic work of Ratnakaravarni
  • ಸರಸತಿ = Tadbhava of Saraswati
  • ಕೊಡಗಲುದಿಸಿರ್ಪ ನದಿ = River Kaveri
  • ತಡೆವಣೆಯ ಕಟ್ಟೆಗಳ ಬಿಡದೆ ಕಟ್ಟಿದ ಶಿಲ್ಪಿ = The architect who built dams - Sir M. Visvesvaraya
  • ತ್ರಸ್ತ = Frightened one, used here to mean the Tibetans who have found refuge in the safety of Karnataka (Bailukuppe)
  • ಹಲರು = ಹಲರು
  • ಇಳೆಯಣುಗಿಯೊಡಲಿಗರು = ಇಳೆ (Earth) ಣುಗಿ (Daughter)ಡಲಿಗರು (Children) - KannaDambe, who is the daughter of mother earth, is protected by the Kannadigas, her children.

ಚಿತ್ರ: ಬಿ. ಕೆ. ಎಸ್. ವರ್ಮರ ತಾಯಿ ಭುವನೇಶ್ವರಿಯ ಕಲಾಕೃತಿ

Comments

Popular posts from this blog

Bhagyada Lakshmi Baramma: Lyrics and Some of the Best Renditions

Kannada translation of Robert Frost's "The Road Not Taken"

ಮಂಜಿನ ಸಂಜೆಯ ಅರಣ್ಯವಾಸ್ತವ್ಯ - Kannada Translation of "Stopping By Woods on a Snowy Evening" by Robert Frost